Ticker

5/recent/ticker-posts

Header Ads Widget

MANGALORE UNIVERSITY

ನೆನಪಿನ ಪಯಣ-01


ಪದವಿ ದಿನಗಳು ಮತ್ತು ನಂತರ...


ನಾವು ಡಿಗ್ರಿಯಲ್ಲಿದ್ದ ದಿನಗಳ ನೆನಪೆಂದರೆ 19 ವರ್ಷಗಳ ಹಿಂದಿನ ನೆನಪು. ಕೆಲವು ಮಸುಕು ಮಸುಕಾಗಿದೆ. ಕೆಲವು ಕನ್ನಡಿಯ ಪ್ರತಿಬಿಂಬದ ಹಾಗೆ ನಿಚ್ಚಳವಾಗಿದೆ. ಕೆಲವು ಯಾರಾದರೂ ನೆನಪು ಮಾಡಿಕೊಟ್ಟರೆ ಥಟ್ಟನೆ ನೆನಪಾಗುತ್ತದೆ. ವಾಸ್ತವ ಎಂದರೆ ತುಂಬ ಮಂದಿಯ ಫೋಟೋ ನೋಡಿದ ತಕ್ಷಣ (ಮುಖ್ಯವಾಗಿ ಬಿ ಸೆಕ್ಷನ್ ನವರ ಪರಿಚಯ ಕಮ್ಮಿ ಹಾಗಾಗಿ) ಅವರ ನೆನಪಾಗುತ್ತದೆ. ಹೆಸರು ಕೇಳಿದ ಹಾಗಾಗುತ್ತದೆ. ಅವರ ಪರಿಚಯ ಆದ ತಕ್ಷಣ ನೆನಪಾಗುತ್ತದೆ ಕಾಲೇಜು ದಿನಗಳು...

ಅಂದಿನ ನೆನಪುಗಳು ಚದುರಿ ಹೋಗಿವೆ... ಹೆಕ್ಕಿ ತೆಗೆದರೆ ತುಂಬ ನೆನಪುಗಳಿರುತ್ತವೆ. ಮುಡಿಪು ಎಂಬ ಗ್ರಾಮೀಣ ಭಾಗದಲ್ಲಿ ಪಿಯುಸಿ ಮುಗಿಸಿ ಬಂದ ನಾನು, ಫಾರೂಕು, ನವೀನ, ಜಗ್ಗ, ಹರೀಶ, ಪುಷ್ಪರಾಜ, ಇನ್ನೊಬ್ಬ ನವೀನ, ಸುರೇಂದ್ರ ಮತ್ತಿತರರು ಯುಸಿಎಂನಲ್ಲೂ ಒಟ್ಟಾಗಿಯೇ ಇರುತ್ತಿದ್ದೆವು,. ನಮಗೆ ಸ್ವಲ್ಪ ಇಂಗ್ಲಿಷ್ ಸಮಸ್ಯೆ ಇತ್ತು . ಮತ್ತೆ ಪೇಟೆಯ ವಾತಾವರಣ ಪರಿಚಯ ಕಮ್ಮಿ. ಆದರೆ ಬರ ಬರುತ್ತಾ ಎಲ್ಲ ಅಭ್ಯಾಸ ಆಯ್ತು.

ವೆನ್ಲಾಕ್ ಆಸ್ಪತ್ರೆ ಪಕ್ಕದಲ್ಲೇ ಇದ್ದ ಬಿಕಾಂ ಕ್ಲಾಸ್ ರೂಂ. ಚೆಂದಕೆ ನೋಟ್ಸ್ ಕೊಡುತ್ತಿದ್ದ ಲೆಕ್ಚರರ್ಸ್, ಕನ್ನಡದಲ್ಲೂ ಮಾತನಾಡುತ್ತಿದ್ದದ್ದು ಸಮಾಧಾನ ತರುತ್ತಿತ್ತು. ಸೆಂಟರಿನಲ್ಲೇ ಇದ್ದ ರವೀಂದ್ರ ಕಲಾಭವನ, ಆದರಾಚೆ ಲೈಬ್ರೇರಿ, ರೀಡಿಂಗ್ ರೂಂ, ಸೈನ್ಸ್ ಬ್ಲಾಕ್ ಪಕ್ಕದಲ್ಲಿದ್ದ ಟಾಯ್ಲೆಟ್ ಅಲ್ಲಿನ ವಿಚಿತ್ರ ಬರಹಗಳು, ಮಧ್ಯಾಹ್ನ ಗೀತ ಮಹಲ್ ಹೋಟೆಲಿನಲ್ಲಿ ತಿನ್ನುತ್ತಿದ್ದ ಪರೋಟ (4 ರು. ಅಂತ ನೆನಪು), ನಮ್ಮ ಕ್ಲಾಸಿಗೆ ಹತ್ತುವ ಮೆಟ್ಟಿಲಿನ ಪಕ್ಕ ಇದ್ದ ಸ್ಟೇಷನರಿ ಅಂಗಡಿ, ಪಾಠ ಕೇಳದಷ್ಟು ಕಿವಿಗಡಚಿಕ್ಕುವಂತಿದ್ದ ವಾಹನಗಳ ಓಡಾಟದ ಸದ್ದು... ಇದೆಲ್ಲ ನೆನಪು.
ನಾವು ಬಹುಷಃ ಸೆಕೆಂಡ್ ಇಯರಿನಲ್ಲಿದ್ದಾಗ ಲೆಕ್ಚರರ್ಸ್ ಸುಮಾರು 15 ದಿನ ಮುಷ್ಕರ ಮಾಡಿದ್ದರು. ಮೀನಾ ಮೇಡಂ ಮಾತ್ರ ಪಾಠ ಮಾಡುತ್ತಿದ್ದರು ಅಂತ ನೆನಪು. 

 
ರವೀಂದ್ರ ಕಲಾ ಭವನದಲ್ಲಿ ವರ್ಷದಲ್ಲಿ 3-4 ಬಾರಿ ನಡೆಯುತ್ತಿದ್ದ ಕಾರ್ಯಕ್ರಮಗಳು, ಹಿಂದಿನಿಂದ ಕೇಳಿ ಬರುತ್ತಿದ್ದ ಗಲಾಟೆ, ಫ್ಯಾನಿಗೆ ಕಲ್ಲಿನ ತುಂಡು ಎಸೆಯುವುದು, ಕೆಲವೊಮ್ಮ ಗಲಾಟೆ ಜಾಸ್ತಿಯಾಗಿ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುತ್ತಿದ್ದುದು. ಸೆಂಟ್ರಲ್ ಟಾಕೀಸ್ ದಾಟಿ ನೆಹರೂ ಮೈದಾನಕ್ಕೆ ಸಂಜೆ ಬಸ್ಸಿಗೆ ನಡೆದುಕೊಂಡು ಹೋಗುತ್ತಿದದ... ಎಲ್ಲ ನೆನಪುಗಳು.



ವೇದಿಕೆಯಲ್ಲಿ ಸುಶೀಲ್, ಸಚಿನ್ ಮಾಡುತ್ತಿದ್ದ ನೃತ್ಯಗಳು ನೆನಪಿದೆ. ಮಾರಿ ಕಣ್ಣು ಹೋರಿ ಮ್ಯಾಲೆ ಹಾಡಿಗೆ ಚಡ್ಡಿ ಮೇಲೆ ಪಂಚೆ ಉಟ್ಟು ಮಾಡಿದ ನೃತ್ಯ ಈಗಲೂ ನೆನಪಿದೆ. ತ್ರಿವೇಣಿ ಒಳ್ಳೆ ಎಂಸಿ ಮಾಡ್ತಾ ಇದ್ದಳು ಅಂತ ನೆನಪು. ಶಕೀಲ್ ಯೂತ್ ಪಾರ್ಲಿಮೆಂಟಿನಲ್ಲಿ ಸಕ್ರಿಯನಾಗಿದ್ದ. ಪಾಠ ಮುಗಿದ ಲೆಕ್ಚರರ್ಸ್ ಸ್ಟಾಫ್ ರೂಮಿಗೆ ಹೋಗುವಾಗ ಧನವಂತಿ ಅವರ ಹಿಂದೆಯೇ ಹೋಗಿ ಡೌಟ್ ಕೇಳ್ತಾ ಇದ್ದದ್ದು ಈಗಲೂ ನೆನಪಿದೆ.



ಜ್ಯೋತಿಲಕ್ಷ್ಮಿ ಯಾವಾಗಲೂ ಡೆಸ್ಕಿಗೆ ತಲೆಯಿಟ್ಟು ನಿದ್ರೆ ಮಾಡ್ತಾ ಇದ್ದದ್ದು ನೆನಪಿದೆ. ಫ್ರಂಟ್ ಬೆಂಚಿನ ನಾಗರಾಜ ರಾವ್ ತುಂಬ ಆಕ್ಟಿವ್. ಸುಧಾ ಮೇಡಂ ಸಿಟ್ಟು ಬಂದು ಬೈಯುತ್ತಿದ್ದಾಗ ಹಿಂದಿನ ಬೆಂಚಿನ ಕೆಲವು ಸ್ನೇಹಿತರು ... ಮಣಿಪೊಡ್ಚಿಯ, ಆರೆಗ್ ಕೋಪ ಬೈದ್ಂಡ್ ಅಂತ ಅವರಿಗೆ ಕೇಳುವ ಹಾಗೆಯೇ ಹೇಳುತ್ತಿದ್ದಾಗ ಅವರಿಗೆ ನಗು ಬಂದು ಬೈಗಳು ಅಲ್ಲಿಗೇ ನಿಲ್ಲುತ್ತಿತ್ತು..



ಮತ್ತೆ ಸೀತಾರಾಂ ಪೂಜಾರಿ ಅವರು ಪಾಠ ಮಾಡುತ್ತಿದ್ದಾಗ ಬಾಗಿಲ ಹಿಂದೆ ಊದುಬತ್ತಿಯ ಗರ್ನಲ್ ಟೈಂ ಬಾಂಬ್ ಸ್ಫೋಟ ಆದದ್ದು ನೆನಪಿದೆ. ಪ್ರಶಾಂತ್ ಶಟ್ಟಿ ಕಾಲೇಜ್ ಡೇ ದಿನ ಹಾಡಿದ್ದು ನೆನಪಿದೆ. ಕಹೋನಾ ಪ್ಯಾರ್ ಹೇ ಮತ್ತು ಟೈಟಾನಿಕ್ ಮೂವಿ ತುಂಬ ಹಿಟ್ ಆಗಿದ್ದು, ತುಂಬ ಜನ ಕ್ಲಾಸ್ ಬಂಕ್ ಮಾಡಿ ಹೋಗ್ತಾ ಇದ್ದದ್ದು ನೆನಪಿದೆ. ಎನ್ ಸಿಸಿ ಸೇರಿದವರು ಕೆಲವೊಮ್ಮೆ ಎನ್ ಸಿಸಿ ಸೆಶನ್ ಗಳಿಗೆ ಹೋಗಲು ಉದಾಸೀನದಿಂದ ಕ್ಲಾಸಿನಲ್ಲಿ ತಲೆ ಮರೆಸುತ್ತಾ ಇದ್ದಿದ್ದು, ಅವರನ್ನ ಹುಡುಕಿಕೊಂಡು ಸೀನಿಯರ್ ಗಳು ಬರುತ್ತಿದ್ದುದು, ನಾನು, ಫಾರೂಕ್ ವಾಲ್ ಮ್ಯಾಗಝೀನ್ ಗೆ ಫೈನಲ್ ಇಯರಿ ಓಡಾಡಿದ್ದು ಇನ್ನಷ್ಟು ನೆನಪುಗಳು.

ರವೀಂದ್ರ ಕಲಾ ಭವನದ ಎದುರಿನ ಸೋಮಾರಿ ಕಟ್ಟೆಯಲ್ಲಿ ವಿದ್ಯಾರ್ಥಿಗಳು ಪಟ್ಟಾಂಗ ಹೊಡೆಯುತ್ತಾ ಇದ್ದದ್ದು ಮರೆಯುವ ಹಾಗೆಯೇ ಇಲ್ಲ.

-ಕೆಎಂ.

Post a Comment

0 Comments