Ticker

5/recent/ticker-posts

Header Ads Widget

MANGALORE UNIVERSITY

ನೆನಪಿನ ಪಯಣ-06

ನೆನಪಿನ ಪಯಣ-06


ಆಸಕ್ತಿ ಮತ್ತು ಹೊಟ್ಟೆಪಾಡು ಜೊತೆಜೊತೆಯಾಗಿಯೇ ಸಾಗಬೇಕೆಂದಿಲ್ಲ. ಜೀವನ ಸಾಗಿಸಲು ದುಡ್ಡು ಬೇಕು. ದುಡ್ಡು ಸಂಪಾದಿಸಲು ಕೆಲಸ ಬೇಕು. ನಾವು ಹುಡುಕಿದ ಅಥವಾ ಪಡೆದ ಕೆಲಸ ನಮ್ಮ ಆಸಕ್ತಿ ಅಥವಾ ಕಲಿತ ಕ್ವಾಲಿಫಿಕೇಶನಿಗೆ ಸೂಕ್ತವೇ ಇರಬೇಕೆಂದಿಲ್ಲ. ಎಷ್ಟೋ ಸಲ, ಎಷ್ಟೋ ಮಂದಿ ಸಿಕ್ಕಿದ ಕೆಲಸಕ್ಕೆ ತೃಪ್ತಿ ಪಡಬೇಕಾಗುತ್ತದೆ. ಅಥವಾ ದೊರಕಿದ ಕೆಲಸದ ಜೊತೆ ಹೊಂದಿಕೊಂಡು ಬದುಕಬೇಕಾಗುತ್ತದೆ. ನಾನು ಕಲಿತ ಕ್ವಾಲಿಫಿಕೇಶನಿಗೆ ಈ ಕೆಲಸವಲ್ಲ ಎಂದೋ ಅಥವಾ ನಾನು ಕಂಡ ಕನಸಿನ ಕೆಲಸ ಇದಲ್ಲ ಎಂದೋ ಪರಿತಪಿಸುತ್ತಾ ಕುಳಿತರೆ ಮಾಡುತ್ತಿರುವ ಕೆಲಸಕ್ಕೆ ನ್ಯಾಯ ಸಲ್ಲಿಸಲೂ ಸಾಧ್ಯವಾಗುದುದಿಲ್ಲ, ಮಾತ್ರವಲ್ಲ ಮನಶ್ಶಾಂತಿಯೂ ಇರುವುದಿಲ್ಲ.


ಕಾಲೇಜು ಕಲಿಯುತ್ತಿರುವಾಗ ಪ್ರತಿಯೊಬ್ಬರಿಗೂ ಒಂದೊಂದು ಕನಸು ಇದ್ದಿರಬಹುದು. ಆ ಕೆಲಸ ಮಾಡಬೇಕು, ಈ ಕೆಲಸ ಮಾಡಬೇಕು ಎಂದೆಲ್ಲ. ಬೇರೆ ಬೇರೆ ಪ್ರತಿಭೆ ಹೊಂದಿದವರು ಕಾಲೇಜಿನಲ್ಲಿ ಕಾಣ ಸಿಗುತ್ತಾರೆ. ಡ್ಯಾನ್ಸು, ಹಾಡುವವರು, ಸ್ಪೋರ್ಟ್ಸಿನಲ್ಲಿ ಸಕ್ರಿಯ ಇರುವವರು, ತುಂಬ ಚೆನ್ನಾಗಿ ಬರೆಯುವವರು, ತುಂಬ ಚೆಂದದ ಸ್ವರ ಇರುವವರು, ಮಾತನಾಡುವವರು, ಚೆನ್ನಾಗಿ ಚಿತ್ರ ಬಿಡಿಸುವವರು.... ಹೀಗೆ ಬೇರೆ ಬೇರೆ ಪ್ರತಿಭೆ ಇರುವವರು ಇರುತ್ತಾರೆ. ಆದರೆ, ಒಂದು ಹತ್ತು ವರ್ಷ ಕಳೆದ ಬಳಿಕ ಅವರನ್ನು ಮಾತನಾಡಿಸಿ ನೋಡಿಯಂತೆ ಅವರೆಲ್ಲ ಅವರೊಳಗಿನ ಪ್ರತಿಭೆಗೆ ಪೂರಕವಾದ ಕೆಲಸ ಮಾಡುತ್ತಾ ಇರುವುದಿಲ್ಲ, ಅಥವಾ ಇರಬೇಕಾಗಿಲ್ಲ. ಈ ಗ್ರೂಪನ್ನೇ ಉದಾಹರಣೆ ತೆಗೆದುಕೊಳ್ಳಿ, ಬಿಕಾಂ ಕ್ವಾಲಿಫಿಕೇಶನಿಗೆ ಪೂರಕವಾಗಿ ಎಷ್ಟು ಜನಕ್ಕೆ ಕೆಲಸ ಸಿಕ್ಕಿದೆ, ಆಲೋಚನೆ ಮಾಡಿ. 10 ಮಂದಿಯಲ್ಲಿ ಒಬ್ಬರಿಗೋ, ಇಬ್ಬರಿಗೋ ಅವರವರವ ಪ್ರತಿಭೆಗೆ ಪೂರಕವಾಗಿ ಹುದ್ದೆ ದೊರಕಬಹುದು. ಅಥವಾ ಕೈಯ್ಯಲ್ಲಿ ಬಂಡವಾಳ ಹಾಕಲು ಧಾರಾಳ ದುಡ್ಡಿದ್ದರೆ ಅವರವರೇ ತಮಗೆ ಬೇಕಾದ ಬಿಝಿನೆಸ್ ಶುರು ಮಾಡಬಹುದು.

ಇದು ಹೇಗೆಂದರೆ ಇಷ್ಟ ಪಟ್ಟ ಹುಡುಗನೋ, ಹುಡುಗಿಯೋ ಸಿಕ್ಕದಿದ್ದರೂ ಅಪ್ಪ ಅಮ್ಮ ನೋಡಿದ ಹುಡುಗನನ್ನೋ, ಹುಡುಗಿಯನ್ನೋ ಮದುವೆಯಾಗಿ ನಂತರ ಆತ ಅಥವಾ ಆಕೆಯನ್ನು ಇಷ್ಟ ಪಡುವ ಹಾಗೆ. ದಾರಿ ಯಾವುದೇ ಆದರೂ ಆ ದಾರಿ ನಮ್ಮನ್ನು ನಡೆಸಿಕೊಂಡು ಹೋಗುತ್ತಲೇ ಇರುತ್ತದೆ. ತೀರಾ ಸಂತೃಪ್ತಿ ಅಥವಾ ತೀರಾ ನಿರಾಸೆ ಅನ್ನುವುದು ನಾವು ಆ ವಿಷಯ ಅಥವಾ ವ್ಯಕ್ತಿಯನ್ನು ಗ್ರಹಿಸುವುದರಲ್ಲಿ ಇರುವುದು. ಪ್ರೀತಿಸಿ ಮದುವೆಯಾದ ಜೋಡಿ ಬದುಕಿನುದ್ದಕ್ಕೂ ಸಾಮರಸ್ಯದಿಂದ ಅದೇ ಆರಂಭದ ಪ್ರೀತಿಯಿಂದ ಬದುಕಬೇಕೆಂದೇನೂ ನಿಯಮವೋ, ಪರಂಪರೆಯೋ ಇಲ್ಲ. ಆರೇಂಜ್ಡ್ ಮದುವೆಯಾದವರು ಬದುಕಿನುದ್ದಕ್ಕೂ ಹೊಂದಾಣಿಕೆ ಇಲ್ಲದೇ ಬದುಕುತ್ತಾರೆ ಎಂದೂ ಇಲ್ಲ. ಹೊಂದಾಣಿಕೆ, ಅರ್ಥೈಸಿಕೊಳ್ಳುವಿಕೆ ಹಾಗೂ ಅತಿಯಾದ ನಿರೀಕ್ಷೆ ಇರಿಸದೇ ಇರುವ ಗುಣಗಳಿದ್ದರೆ ಎಲ್ಲಿಯೂ ಬದುಕಬಹುದು. ಅದು ಈ ಹೊತ್ತಿನ ಅನಿವಾರ್ಯತೆಯೂ ಹೌದು.

ನಮಗೆ ಸಿಕ್ಕುವ ಕೆಲಸವೂ ಅಷ್ಟೇ. ಒಂದು ಪ್ರಾಯದಲ್ಲಿ ನಮ್ಮಲ್ಲಿರುವ ಪ್ರತಿಭೆಗೆ ಪೂರಕವಾದ ಕೆಲಸ ಸಿಕ್ಕರೆ ಉತ್ತಮ ಎಂಬ ಭಾವನೆ ಇರುತ್ತದೆ. ಆದರೆ ನಮ್ಮಲ್ಲಿರುವ ಹವ್ಯಾಸ ಎಷ್ಟರಮಟ್ಟಿಗೆ ನಮ್ಮ ಹೊಟ್ಟೆ ತುಂಬಿಸುತ್ತದೆ ಎಂದೂ ಯೋಚಿಸಬೇಕಾಗುತ್ತದೆ. ಒಬ್ಬನಲ್ಲಿ ಚಂದ ಹಾಡುವ ಅಭ್ಯಾಸ ಇದೆ ಎಂದುಕೊಳ್ಳಿ. ಹಾಡುವುದರಿಂದಲೇ ಆತ ವರ್ಷಪೂರ್ತಿ ಬದುಕುವಷ್ಟು ದುಡ್ಡು ಸಂಪಾದಿಸಲು ಸಾಧ್ಯವ ಎಂದು ಯೋಚಿಸಬೇಕು. ಇನ್ನೊಬ್ಬ ಕ್ರೀಡೆಯಲ್ಲಿ ಚುರುಕಿರಬಹುದು. ಆದರೆ ಕ್ರೀಡೆಯನ್ನೇ ವೃತ್ತಿಯಾಗಿಸಿ ಬದುಕಲು ಸಾಧ್ಯವಾ ಅಂತ ಯೋಚಿಸಬೇಕಾಗುತ್ತದೆ. ಅವರವರ ಅದೃಷ್ಟ, ಅವಕಾಶ, ಸಮಯ, ಸಂದರ್ಭ, ಹಣೆಬರಹ ಎಲ್ಲ ಸೇರಿ ಒಂದು ಕೆಲಸ ಅಂತ ಸಿಗುತ್ತದೆ. ತುಂಬ ಮಂದಿ ತಾವು ಮಾಡುತ್ತಿರುವ ವೃತ್ತಿಯ ಜೊತೆಗೇ ಹವ್ಯಾಸಗಳನ್ನು ಪೋಷಿಸುತ್ತಾ ಬರುತ್ತಾರೆ. ಅದು ಅವರಿಗೆ ಜಾಬ್ ಸ್ಯಾಟಿಸ್ ಫ್ಯಾಕ್ಷನ್ ಕೂಡಾ ಕೊಡುತ್ತದೆ, ಜೊತೆಗೆ ಪ್ರೀತಿಯ ಹವ್ಯಾಸದ ಸಂಪರ್ಕ ಕಡಿಯದಂತೆ ನೋಡಿಕೊಳ್ಳುತ್ತದೆ. ಇದು ಅತ್ಯಂತ ಸೂಕ್ತವಾದ ವಿಧಾನ.

ಇನ್ನು ಹುಡುಗಿಯರ ಬಗ್ಗೆ ಹೇಳಬೇಕೆಂದರೆ ಕಾಲೇಜು ದಿನಗಳಲ್ಲಿ ತುಂಬ ಚುರುಕಾಗಿ ಕಲಿತವರು, ತುಂಬ ಕನಸುಗಳನ್ನು ಕಟ್ಟಿಕೊಂಡವರೂ ಮದುವೆಯ ಬಳಿಕ ಹೌಸ್ ವೈಫ್ ಪಟ್ಟ ಕಟ್ಟಿಕೊಂಡು ಮನೆಯಲ್ಲಿರುತ್ತಾರೆ. ಈ ಪೈಕಿ ತುಂಬ ಜನಕ್ಕೆ ಅಸಮಾಧಾನವೂ ಇರುತ್ತದೆ, ಕಲಿತೂ ಮನೆಯಲ್ಲಿ ಇದ್ದೇನಲ್ಲ ಅಂತ. ನನ್ನ ಅನಿಸಿಕೆ, ನೀವು ಹೌಸ್ ವೈಫ್ ಆಗಿ ಮನೆಯಲ್ಲಿರುವ ಸಂದರ್ಭ ಸೃಷ್ಟಿಯಾಗಿರಬಹುದು. ಆದರೆ ಆ ಬಗ್ಗೆ ಕೀಳರಿಮೆಯೋ ನೀವೊಬ್ಬ ಕೆಲಸಕ್ಕೆ ಬಾರದವರೆಂಬ ಬೇಸರವೋ ಖಂಡಿತಾ ಬೇಡ. ಮನೆವಾರ್ತೆ ನೋಡಿಕೊಂಡು ಮಕ್ಕಳಿಗೆ ಆ ಪ್ರೀತಿ ಕೊಟ್ಟು ಬೆಳೆಸುವ ಜವಾಬ್ದಾರಿ ಥ್ಯಾಂಕ್ ಲೆಸ್ ಜಾಬ್ ಖಂಡಿತಾ ಅಲ್ಲ. ಪುರುಷರ ಕೈಯ್ಯಿಂದ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗದ ಜವಾಬ್ದಾರಿ ಅದು. ಅವಕಾಶ ಸಿಕ್ಕಾಗ ಸಣ್ಣ ಪುಟ್ಟ ಕೆಲಸಗಳನ್ನು ಮಾಡಬಹುದು. ಇದು ಆನ್ ಲೈನ್ ಯುಗ. ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲಸಗಳೂ ಇರುತ್ತವೆ. ಅಥವಾ ಮಕ್ಕಳು ಸ್ವಲ್ಪ ದೊಡ್ಡವರಾಗಿ ಶಾಲೆಗೆ ಹೋಗಲು ಶುರು ಮಾಡಿದ ಬಳಿಕವಾದರೂ ಕೆಲಸಕ್ಕೆ ಹೋಗಲು ಪ್ರಯತ್ನಿಸಬಹುದು. ಬರೆಯುವ ಹವ್ಯಾಸ ಇರುವವರು ಬರೆಯಬಹುದು. ಓದಬಹುದು. ತಮ್ಮನ್ನು ಚುರುಕಾಗಿ ಇರಿಸಬಹುದು. ನಾನೊಬ್ಬಳು ಕೆಲಸಕ್ಕೆ ಬಾರದವಳಾದೆ ಎಂದೇ ಕೊರಗಿಕೊಂಡು ಕೂರಬಾರದು. ಸಿಕ್ಕ ಅವಕಾಶವನ್ನು ಹೇಗೆ ಬಳಸಬಹುದೆಂದು ಯೋಚಿಸಿ ಕ್ರಿಯಾಶೀಲರಾಗಿರಲು ಪ್ರಯತ್ನಿಸಬೇಕು. ಯಾಕೆಂದರೆ ಯಾರೂ ಕೂಡಾ ಅವರವರ ಭವಿಷ್ಯವನ್ನು ತಾವಾಗಿ ಬರೆದು ಅದರಂತೆ ಬದುಕಲು ಆಗುವುದಿಲ್ಲ. ಒಂದು ವಿಧಿ, ಅದೃಷ್ಟ, ಪರಿಸ್ಥಿತಿ ಅಂತ ಇರುತ್ತದೆ. ನಾವೆಷ್ಟೇ ಪ್ರಯತ್ನ ಪಟ್ಟರೂ ಕೆಲವೊಮ್ಮ ಅದನ್ನು ಬದಲಿಸಲು ಆಗುವುದಿಲ್ಲ. ಆಗ ನಾವೇ ಪರಿಸ್ಥಿತಿಗೆ ಹೊಂದಿಕೊಂಡು ಮುಂದೆ ಹೋಗಬೇಕಾಗುತ್ತದೆ.

ಇನ್ನೊಂದು ವರ್ಗ ಕೆಲಸಕ್ಕೋಸ್ಕರ ಮನೆ, ಊರು ಬಿಟ್ಟು ಪರವೂರಿಗೆ ಹೋಗಿರುವವರು, ವಿದೇಶಗಳಲ್ಲಿ ನೆಲೆಸಿರುವವರು. ಅವರು ಸಂಪಾದನೆಗೋಸ್ಕರ ಅವರು ದೂರದೂರಿನಲ್ಲಿ ಒಬ್ಬಂಟಿಗಳಾಗಿ ದುಡಿಯುತ್ತಾ ಇರುತ್ತಾರೆ. ವರ್ಷದಲ್ಲಿ ಒಂದು ಸಲವೋ, ಎರಡು ಸಲವೋ ಕುಟುಂಬದವರ ದರ್ಶನ. ಮತ್ತು ಒಡನಾಟ. ಈಗ ಪರವಾಗಿಲ್ಲ ಕೊನೆ ಪಕ್ಷ ಚಾಟಿಂಗ್, ವಿಡಿಯೋ ಕಾಲ್ ಆದರೂ ಮಾಡಬಹುದು. ಮೊದಲೆಲ್ಲ ಪತ್ರಗಳು ಮಾತ್ರವೇ ಸಂಪರ್ಕ ಸೇತುಗಳು. ಬದುಕಿನ ಬಹುಪಾಲು ವಿದೇಶಗಳಲ್ಲೋ, ದೂರದ ಊರುಗಳಲ್ಲೋ ದುಡಿದು ಕುಟುಂಬವನ್ನು ಸಾಕುತ್ತಾರೆ. ಈ ನಡುವೆ ಕುಟುಂಬದವರ ಜೊತೆಗಿನ ಆಪ್ತ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಇಲ್ಲೂ ಅಷ್ಟೇ... ಈ ಬಗ್ಗೆಯೇ ಕೊರಗುತ್ತಾ ಕುಳಿತರೆ ಬದುಕಿನ ಇದ್ದ ಸಂತೋಷವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದೆಲ್ಲ ಬದುಕಿನ ಪಯಣದ ಒಂದು ಭಾಗ ಎಂದಷ್ಟೇ ಅಂಗೀಕರಿಸಬೇಕಷ್ಟೆ....

ಕೊನೆಯದಾಗಿ... ನನ್ನ ಕ್ವಾಲಿಫಿಕೇಶನಿಗೆ ಹೇಳಿ ಮಾಡಿಸಿದ ಕೆಲಸ ಇದಲ್ಲ ಎಂದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಸರಿಯಲ್ಲ. ಕೆಲವೊಮ್ಮೆ ಸಿಕ್ಕಿದ ಕೆಲಸವನ್ನೂ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದಕ್ಕಿಂತ ಹೆಚ್ಚು ಸಂಪಾದನೆಯ ಕೆಲಸಕ್ಕೆ ಶಿಫ್ಟ್ ಆಗಬಹುದಲ್ಲ. ಪ್ರಪಂಚದಲ್ಲಿ ಕಡಿಮೆ ಮರ್ಯಾದೆಯ ಅಥವಾ ಹೆಚ್ಚು ಗೌರವ ಇಲ್ಲದ ಕೆಲಸ ಎಂಬುದೂ ಯಾವುದೂ ಇಲ್ಲ. ಶ್ರದ್ಧೆಯಿಂದ ದುಡಿದರೆ, ಪೂರ್ತಿ ತೊಡಗಿಸಿಕೊಂಡು ಕೆಲಸ ಮಾಡಿದರೆ ಯಾವ ಕೆಲಸವೂ ಹೊರೆಯಾಗುವುದಿಲ್ಲ, ನಮ್ಮಲ್ಲಿ ಕೀಳರಿಮೆಯನ್ನೂ ಹುಟ್ಟಿಸುವುದಿಲ್ಲ. ಒಂದು ನೆನಪಿಡಿ ನಮ್ಮ ಕೆಲಸದ ಬಗ್ಗೆ, ಭವಿಷ್ಯದ ಬಗ್ಗೆ ದೂರದಲ್ಲಿ ನಿಂತು ಕಲ್ಲೆಸೆಯುವವರು, ತಮಾಷೆ ಮಾಡುವವರು, ಉಚಿತ ಸಲಹೆಗಳನ್ನು ಕೊಡುವವರು ನಮ್ಮ ಬದುಕಿನ ದಾರಿಗೆ ನೆರವಾಗುವುದಿಲ್ಲ. ಅವರದ್ದು ದೂರದಿಂದ ಟೀಕಿಸುವ ಪ್ರವೃತ್ತಿ ಅಷ್ಟೇ. ಅಂತಹ ಟೀಕೆಗಳಿಗೆ ತಲೆ ಕೆಡಿಸಬಾರದು. ಸಿಕ್ಕಿದ ಅವಕಾಶ ಬಳಸಿ ಮುಂದೆ ಹೋಗುವುದೇ ಜಾಣತನ... ಏನಂತೀರಿ?

-ಕೆಎಂ.

Post a Comment

0 Comments