Ticker

5/recent/ticker-posts

Header Ads Widget

MANGALORE UNIVERSITY

ನೆನಪಿನ ಪಯಣ-07

ನೆನಪಿನ ಪಯಣ-07


ಸ್ನೇಹವೆಂದರೇ ಹಾಗೆ... ಯಾವುದೇ ಶಂಕೆ, ಆತಂಕ ಇಲ್ಲದೆ ಎಲ್ಲ ಹಂಚಿಕೊಳ್ಳುವಂಥದ್ದು. ಎಷ್ಟೋ ಬಾರಿ ಮನೆಮಂದಿ, ರಕ್ತಸಂಬಧಿಗಳಲ್ಲಿ ಹೇಳಲಾಗದಂತಹ ಸಂಧಿಗ್ಧಗಳನ್ನೂ ಸ್ನೇಹಿತರ ಜೊತೆ ನಿರಾಳವಾಗಿ ಹೇಳಿ ಹಗುರಾಗಲು ಸಾಧ್ಯವಿದೆ. ಯಾಕೆಂದರೆ ಸ್ನೇಹ ಕಟ್ಟಿಕೊಳ್ಳುವುದು ಯಾವುದೇ ಕಾರಣ, ಶಿಷ್ಟಾಚಾರ ಅಥವಾ ಕಮಿಟ್ ಮೆಂಟುಗಳಿಂದಲ್ಲ. ಅದು ಹೃದಯವೇ ಆರಿಸಿಕೊಳ್ಳುವ ಸಂಬಂಧ. ಹಾಗಾಗಿ ಅಲ್ಲಿ ಯಾವುದೇ ನಿರೀಕ್ಷೆ ಅಥವಾ ಲಾಭ ನಷ್ಟಗಳ ಲೆಕ್ಕಾಚಾರ ಇರುವುದಿಲ್ಲ. ಸ್ನೇಹದ ಓಘದಲ್ಲಿ ಜಾತಿ, ಧರ್ಮ, ಲಿಂಗದ ಹಂಗೂ ಇರುವುದಿಲ್ಲ, ಇರಬೇಕಾಗಿಲ್ಲ. ಮನಸ್ಸು ಸ್ವಚ್ಛವಾಗಿರಬೇಕಷ್ಟೇ... ಅದೇ ಕಾರಣಕ್ಕೆ ಕಾಲೇಜು ದಿನಗಳು ಕಟ್ಟಿಕೊಡುವ ಸ್ನೇಹಿತರ ಜೊತೆಗಿನ ಗಾಢ ಸಂಬಂಧ ಮತ್ತು ಅವರ ಜೊತೆಗಿನ ಒಡನಾಟ ನೀಡುವ ನಿರಾಳತೆಗೆ ಬೆಲೆ ಕಟ್ಟಲಾಗುವುದಿಲ್ಲ. ಇದೇ ಕಾರಣಕ್ಕೆ ಬಹುಷಹ ನಾವು ಗ್ರೂಪಿನಲ್ಲಿ ಇಷ್ಟು ವರ್ಷಗಳ ನಂತರ ಸಿಕ್ಕಾಗ ಏನೋ ಕಳೆದುಕೊಂಡದ್ದನ್ನು ಪಡೆದ ಭಾವವನ್ನು ಅನುಭವಿಸುತ್ತಿದ್ದೇವೆ...

ಕಷ್ಟಕ್ಕೆ ಸಿಕ್ಕುವವರು ಸ್ನೇಹಿತರು, ಸಂಧಿಗ್ಧತೆ ಬಂದಾಗ ಬಗೆಹರಿಸುವವರು ಸ್ನೇಹಿತರು, ಎಷ್ಟೋ ಬಾರಿ ಏನೂ ಹೇಳದೆಯೇ ನಿಮ್ಮ ಗೊಂದಲಗಳನ್ನು ಅರಿತುಕೊಂಡು ಅದರಿಂದ ಹೊರ ಬರಲು ನೆರವಾಗುವವರು ಕೂಡಾ ಸ್ನೇಹಿತರೇ... ಹೇಳದೆಯೇ ನಿಮ್ಮ ದುಗುಡಗಳನ್ನು ಅರಿತುಕೊಳ್ಳಬಲ್ಲ ಸ್ನೇಹಿತರು ನಿಮ್ಮ ಜೊತೆಗಿದ್ದಾರೆಂದರೆ ನೀವು ಅದೃಷ್ಟವಂತರೆಂದೇ ಅರ್ಥ. ಅದೇ ಸಲುಗೆಯಿಂದ ಮಂಗ್ಳೂರಲ್ಲಿ ಸ್ನೇಹಿತರನ್ನೂ ದಾನೆಂಬೆ ಬೇವರ್ಸಿ... ಅಂತಾನೇ ಪ್ರೀತಿಯಿಂದ ಕರೀತಾರೆ.. ಅಲ್ಲಿ ಶಿಷ್ಟಾಚಾರ, ದಾಕ್ಷಿಣ್ಯ, ಏನಂದುಕೊಳ್ತಾನೋ ಎಂಬ ಕಸಿವಿಸಿ ಯಾವುದೂ ಇರುವುದಿಲ್ಲ. 

ಎಲ್ಲೋ ಓದಿದ ನೆನಪು ತುಂಬ ಹೊತ್ತು ನಿಮ್ಮ ಆತ್ಮೀಯ ವ್ಯಕ್ತಿಯೊಬ್ಬರ ಜೊತೆ ಅಕ್ಕಪಕ್ಕ ಕುಳಿತು ಒಂದೇ ಒಂದು ಶಬ್ದವನ್ನೂ ಮಾತನಾಡದೇ ಹೊರಟು ಹೋದರೂ ಆ ಘಳಿಗೆ ನೀಡುವ ಸಾಂತ್ವನವೋ ಅಥವಾ ಆ ಅನುಭೂತಿಯೇ ತೋರಿಸಿಕೊಡುತ್ತದೆ ನಿಮ್ಮ ನಡುವಿನ ಸ್ನೇಹದ ಆಳವನ್ನು....


ಯಾರು ಎಷ್ಟು ಹೊತ್ತು ನಮ್ಮ ಜೊತೆ ನಡೆದಾಡಿದ್ದಾರೆ, ಎಷ್ಟು ವರ್ಷಗಳಿಂದ ನಮ್ಮ ಜೊತೆ ಓಡಾಡಿದ್ದಾರೆ ಎಂಬುದರಿಂದ ಸ್ನೇಹತ ತೀವ್ರತೆ ನಿರ್ಧಾರ ಆಗುವುದಲ್ಲ. ಯಾರ ಹೆಜ್ಜೆ ಗುರುತು ನಮ್ಮ ಎದೆಯಾಳದಲ್ಲಿ ಬಲವಾಗಿ ಮೂಡಿದೆ ಎಂಬ ಕಾರಣಕ್ಕೆ ಸ್ನೇಹ ಹುಟ್ಟುತ್ತದೆ. ಕೇವಲ 10 ನಿಮಿಷಗಳಲ್ಲಿ ಒಂದೊಳ್ಳೆ ಸ್ನೇಹಿತ, ಸ್ನೇಹಿತೆ ನಿಮಗೆ ಸಿಕ್ಕಬಹುದು. 10 ವರ್ಷಗಳಿಂದ ನಿಮ್ಮ ಪಕ್ಕವೇ ಕುಳಿತು ಕೆಲಸ ಮಾಡುವ ಸಹೋದ್ಯೋಗಿಯೊಬ್ಬ ನಿಮ್ಮ ಸ್ನೇಹಿತನಲ್ಲದೇ ಹೋಗಬಹುದು. ನೀವು ಕಳೆದ ಸಮಯದ ಅವಧಿ ಲೆಕ್ಕವಲ್ಲ. ನಿಮ್ಮ ನಡುವಿನ ಕೆಮಿಸ್ಟ್ರಿ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೇ ನಿಮ್ಮನ್ನು ಕಟ್ಟಿ ಹಾಕುತ್ತದೆ.

ಕೆಲವು ಸಂಬಂಧಗಳಿಗೆ ಹೆಸರು ಕೊಡಲು ಆಗುವುದಿಲ್ಲ. ಕೆಲವು ಸಂಬಂಧಗಳನ್ನು ಪದಗಳಲ್ಲಿ ಕಟ್ಟಿ ಹಾಕಲು ಬರುವುದಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾವುದೇ ಶಿಷ್ಟಾಚಾರದ ಹಂಗಿಲ್ಲದೆ, ಯಾವುದೇ ದಾಕ್ಷಿಣ್ಯಗಳ ರಗಳೆಗಳಿಲ್ಲದೆ ಮಾಡುವ ಉಪಕಾರ, ಅವರಿಗೋಸ್ಕರ ನೀಡುವ ಸಮಯ, ಅವರನ್ನು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋಗುವ ಸ್ವಭಾವಗಳೆಲ್ಲ ಸ್ನೇಹದ ಸುತ್ತಮುತ್ತಲ ಗಟ್ಟಿ ಬೇರುಗಳು. ಇದರಾಚೆಗೆ ಪದಗಳಲ್ಲಿ ಸ್ನೇಹವನ್ನು ಕಟ್ಟಿಕೊಡಲು ಹೊರಡುವುದು ಮೂರ್ಖತನವಾದೀತು...

ಸೈಕಲ್ ಸವಾರಿ ಕಲಿತ ಬಳಿಕ ನೀವು ಎಷ್ಟೇ ವರ್ಷ ಸೈಕಲ್ ತುಳಿಯದೆ ಅಭ್ಯಾಸ ಕಳೆದುಕೊಂಡಿದ್ದರೂ ಒಂದೊಮ್ಮೆ ಸೈಕಲ್ ಏರಿದ ಬಳಿಕ ಪೆಡಲ್ ತುಳಿದರೆ ನಿಧಾನವಾಗಿಯಾದರೂ ಆ ಬ್ಯಾಲೆನ್ಸ್ ಮತ್ತೆ ಸಿದ್ಧಿಸುತ್ತದೆ. ಸ್ನೇಹ ಕೂಡಾ ಹಾಗೆಯೇ... ಕಾರಣಾಂತರಗಳಿಂದ ಸ್ವಲ್ಪ ಕಾಲ ದೂರವಾಗಿದ್ದ ಆಪ್ತ ಸ್ನೇಹಿತ ಮತ್ತೆ ಸಿಕ್ಕಾಗ ಪೆಟ್ಟಿಗೆಯ ಬೀಗ ತೆಗೆದ ಹಾಗೆ ಅದೇ ಹಳೆ ಪರಿಮಳ ತಾಜಾ ತಾಜಾ ಮತ್ತೆ ಹೊರ ಬರಬಹುದು.... ಅದಕ್ಕೆ ವಯಸ್ಸಿನ, ಹುದ್ದೆಯ, ಧರ್ಮದ, ಸ್ಥಾನಮಾನದ ಹಂಗು ಇರಬೇಕಾಗಿಲ್ಲ, ಇರುವುದೂ ಇಲ್ಲ. ಅವನ ದೃಷ್ಟಿಯಲ್ಲಿ ಇವ ಅವನ ಸ್ನೇಹಿತ ಮಾತ್ರ... ಅವ ಬೇರಿನ್ನೇನು ಎಂಬುದು ಗೌಣವಾಗಿರುತ್ತದೆ... ನಮ್ಮ ಗ್ರೂಪಿನಲ್ಲಿ ಮತ್ತೆ ನಳನಳಿಸುತ್ತಿರುವ ಸಂಭಾಷಣೆಗಳನ್ನು ಕಂಡಾಗ ಅನಿಸಿದ್ದು ಇದು... ನಿಮಗೂ ಈ ಬಗ್ಗೆ ಹೇಳಲಿದ್ದರೆ ಹಂಚಿಕೊಳ್ಳಿ....

ಇಲ್ಲಿ ತನಕ ಓದಿದವರಿಗೆ ಧನ್ಯವಾದಗಳು...

(ಮುಂದುವರಿಯಲಿದೆ) 
-ಕೆಎಂ

Post a Comment

0 Comments